ಎಂ ಆರ್ ಪಿಕ್ಚರ್ಸ್ ಲಾಂಛನದಲ್ಲಿ ಎಲ್ ಪದ್ಮನಾಭ, ಸಿ.ಎನ್.ಶಶಿ ಕಿರಣ್ ಮತ್ತು ಕೆ.ಗಿರೀಶ್ ಅವರು ನಿರ್ಮಿಸುತ್ತಿರುವ ‘ಜಾನ್ ಜಾನಿ ಜನಾರ್ಧನ್’ ಚಿತ್ರದ ಚಿತ್ರೀಕರಣ ಈಗ ಮುಗಿದು ಆಡಿಯೋ ಬಿಡುಗಡೆ ಹಂತ ತಲುಪಿದೆ. ಅಕ್ಟೋಬರ್ ೩ರಂದು ಚಿತ್ರದ ಹಾಡುಗಳ ಸೀಡಿ ಬಿಡುಗಡೆಯಾಗಲಿದೆ.
‘ವಾರಸ್ದಾರ’, ‘ರಾಜಾಹುಲಿ’, ‘ರುದ್ರ ತಾಂಡವ’ದಂಥ ಕಮರ್ಷಿಯಲ್ ಸಿನಿಮಾಳನ್ನು ನಿರ್ದೇಶಿಸಿದ ಗುರು ದೇಶಪಾಂಡೆ ‘ಜಾನ್ ಜಾನಿ ಜನಾರ್ಧನ್’ ಚಿತ್ರವನ್ನು ನಿರ್ದೇಶಿಸಿದ್ದಾರೆ.
ನಿರ್ಮಾಪಕ ಎಲ್. ಪದ್ಮನಾಭ ಅವರಿಗೆ ‘ಎಂ.ಆರ್. ಪಿಕ್ಚರ್ಸ್’ ಲಾಂಛನದಲ್ಲಿ ವರ್ಷಕ್ಕೆ ಒಂದಾದರೂ ಉತ್ತಮ ಚಿತ್ರವನ್ನು ನಿರ್ಮಿಸಬೇಕು ಎನ್ನುವ ಬಯಕೆಯಂತೆ. ಇದರ ಆರಂಭಿಕ ಪ್ರಯತ್ನವಾಗಿ ಈಗ ‘ಜಾನ್ ಜಾನಿ ಜನಾರ್ಧನ್’ ತಯಾರಾಗಿದೆ. ‘ಜಾನ್ ಜಾನಿ ಜನಾರ್ಧನ್’ ಬೃಹತ್ ತಾರಾಗಣ ಹೊಂದಿರುವ ಚಿತ್ರ. ಮೂವರು ನಾಯಕರು ಮುಖ್ಯವಾಗಿರುವ ಈ ಚಿತ್ರದಲ್ಲಿ ಎಂ.ಎಸ್ ಉಮೇಶ್, ಗಿರಿಜಾ ಲೋಕೇಶ್, ಬ್ಯಾಂಕ್ ಜನಾರ್ಧನ್, ಟೆನ್ನಿಸ್ ಕೃಷ್ಣ, ಗುರುನಂದನ್, ಯಶವಂತ್ ಶೆಟ್ಟಿ, ಶ್ರೀನಿವಾಸಮೂರ್ತಿ, ರವಿಶಂಕರ್ ಗೌಡ, ಪ್ರಶಾಂತ್ ಸಿದ್ದಿ, ಲಕ್ಷ್ಮೀದೇವಿ, ಬಿರಾದಾರ್, ಗಿರಿಜಾ ಲೋಕೇಶ್, ಜಯಶ್ರೀ, ದಿಯಾ, ಸಂಕೇತ್ ಕಾಶಿ, ರೇಖಾ ಕುಮಾರ್, ಚಿತ್ರಾ ಶೆಣೈ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ. ಜೊತೆಗೆ ಮಾಲಾಶ್ರೀ, ಐಂದ್ರಿತಾ ರೇ, ಮುಂಬೈ ಬೆಡಗಿ ಕಾಮನಾ ರಾನಾವತ್ ಕೂಡಾ ನಟಿಸಿದ್ದಾರೆ. “ಸಂಪೂರ್ಣ ಹಾಸ್ಯದೊಂದಿಗೆ ಗಂಭೀರವಾದ ವಿಚಾರವೊಂದನ್ನು ತೆರೆದಿಡುವ ಪ್ರಯತ್ನ ಇದಾಗಿದೆ” ಎನ್ನುವುದು ನಿರ್ಮಾಪಕ ಪದ್ಮನಾಭ ಅವರ ಅಭಿಪ್ರಾಯ.
ಈ ಚಿತ್ರಕ್ಕಾಗಿ ಎರಡು ಹಾಡುಗಳನ್ನು ಬ್ಯಾಂಕಾಕ್ ಮತ್ತು ಪಟಾಯಗಳಲ್ಲಿ ಚಿತ್ರೀಕರಿಸಲಾಗಿದೆ. ಅಜಯ್ ರಾವ್, ಲೂಸ್ ಮಾದ ಯೋಗೇಶ್, ಮದರಂಗಿ ಕೃಷ್ಣ ಮತ್ತು ರಷ್ಯನ್ ಡ್ಯಾನ್ಸರ್ಗಳು ಪಾಲ್ಗೊಂಡಿರುವ, ಬಹದ್ದೂರ್ ಚೇತನ್ ಬರೆದಿರುವ ‘ಜಾನ್ ಜಾನಿ ಜನಾರ್ಧನ್’ ಎಂಬ ಇಂಟ್ರಡಕ್ಷನ್ ಹಾಡು ಮತ್ತು ಎ.ಪಿ. ಅರ್ಜುನ್ ಬರೆದಿರುವ ‘ರೂಮಿಗೆ ಒಂದು ಕಾಗದ ಬಂದು ಬಿತ್ತು’ ಎನ್ನುವ ಹಾಡುಗಳನ್ನು ಬ್ಯಾಂಕಾಂಕ್ ಮತ್ತು ಪಟಾಯದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಕೆ.ಕಲ್ಯಾಣ್, ಅಲೆಮಾರಿ ಸಂತು, ಬಹದ್ದೂರ್ ಚೇತನ್, ಅಂಬಾರಿ ಅರ್ಜುನ್ ಮತ್ತು ಗುರುದೇಶಪಾಂಡೆ ಸೇರಿದಂತೆ ಕನ್ನಡ ಚಿತ್ರರಂಗದ ಐದು ಜನ ಖ್ಯಾತ ನಿರ್ದೇಶಕರುಗಳು ತಲಾ ಒಂದೊಂದು ಹಾಡು ಬರೆದಿದ್ದಾರೆ.
‘ಜಾನ್ ಜಾನಿ ಜನಾರ್ಧನ್’ ಚಿತ್ರತಕ್ಕೆ ಗುರು ದೇಶಪಾಂಡೆ ಅವರ ನಿರ್ದೇಶನವಿದ್ದು, ಅರ್ಜುನ್ ಜನ್ಯರ ಸಂಗೀತ ನಿರ್ದೇಶನ ಮತ್ತು ಸಂತೋಶ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ‘ಮದರಂಗಿ’ ಖ್ಯಾತಿಯ ಕೃಷ್ಣ ನಾಗಪ್ಪ, ಅಜಯ್ ರಾವ್, ಲೂಸ್ ಮಾದ ಯೋಗೇಶ್ ‘ಜಾನ್ ಜಾನಿ ಜನಾರ್ಧನ್’ ಆಗಿ ಅಭಿನಯಿಸುತ್ತಿದ್ದಾರೆ.